| Prof.Shivarama Kadanakuppe, Principal, Vidyavardhaka High School, Mysore-570021. |
|
ಪ್ರೀತಿಯ ಶ್ರೀ ಎಂ.ಎಸ್.ಪರಶಿವಮೂರ್ತಿ ಅವರಿಗೆ ನಮಸ್ಕಾರಗಳು.
ಬಹುಶಃ ನೀವು ನನಗಿಂತ ಎರಡು ಮೂರು ವರ್ಷ ಹಿರಿಯರಿರಬಹುದು. ಮಂಡ್ಯದ ನಿಮ್ಮ ಬಾಲ್ಯದ ಪರಿಸರ ನನಗೂ ಪರಿಚಿತವೇ.
ಅಲ್ಲೆಲ್ಲ ನಾನು ಅಲೆದಾಡಿದ್ದೇನೆ-ಹುಚ್ಚನಂತೆ. ನಿಮ್ಮ ಆ ಅನುಭವಗಳು ಅತ್ಯಂತ ಆತ್ಮೀಯವಾಗಿ ದಾಖಲಾಗಿವೆ.
ನಿಮ್ಮ ಕೃತಿಯನ್ನು ಓದಿ ನನಗೆ- ಒಂದೆರಡು ಕಡೆ ಕಂಬನಿಯೂ ಹರಿದಿದೆ. ತುಂಬಾ ಹೃದಯಕ್ಕೆ ನಾಟಿದ್ದು- ನಿಮ್ಮ
ಪ್ರಾಮಾಣಿಕತೆ. ಇಂದಿನ ನಮ್ಮ ಬರಹಗಾರರಲ್ಲಿ ಅದರ ಕೊರತೆ ಎದ್ದು ಕಾಣುತ್ತಿರುವುದು ನನ್ನಂಥವರಿಗೆ
ಆತಂಕವನ್ನುಂಟುಮಾಡುತ್ತಿದೆ. ಅದರಲ್ಲೂ ನಮ್ಮ ದಲಿತ ಬರಹಗಾರರಲ್ಲಿ ಇದು ಕಣ್ಬೆಳಕಿನಷ್ಟು ನಿಚ್ಚಳ. ತಮ್ಮ ಬದುಕಿನ
ಮಂಡನೆಯೆಂಬುದು ವರ್ತಮಾನದ ರಕ್ಷಾಕವಚವಾಗಿ ಬಳಕೆಯಾಗಬಾರದು; ವೈಭವೀಕರಣವಾಗಬಾರದು. ಅದು ನಿಮ್ಮಲ್ಲಿ ಆಗಿಲ್ಲವೆಂಬುದೇ
ನನ್ನ ಅಭಿಮಾನಕ್ಕೆ ಕಾರಣವಾಗಿದೆ. ನಾನು ಕಳೆದೆರಡು ದಶಕಗಳಲ್ಲಿ ಓದಿದ ದಲಿತ ಆತ್ಮಕಥನಗಳಲ್ಲಿ- ಮರಾಠಿಯೂ ಒಳಗೊಂಡಂತೆ-
ನಿಮ್ಮದು ಉತ್ತಮ ಬರಹ. ಇದೊಂದು ಮುಖ್ಯ ಪ್ರಮಾಣಿಕ ಕಥಾನಕವಾಗಿ ಖಂಡಿತ ದಾಖಲಾಗುತ್ತದೆ. ಇದು ನನ್ನ ಓದಿನ ವ್ಯಾಪ್ತಿ,
ಅನುಭವ ಮತ್ತು ಗ್ರಹಿಕೆಯ ಆಧಾರದ ಮೇಲೆ ಹೇಳುತ್ತಿದ್ದೇನೆ.
ನಿಮ್ಮ ಆತ್ಮಕಥನದ ಹಿರಿತನವೇ ಅದರ ಪ್ರಾಮಾಣಿಕತೆಯೆಂದು ಈ ಮೊದಲೇ ಹೇಳಿದ್ದೇನೆ. ನಿಮ್ಮ ಪ್ರತಿ ಬರಹದ ಒಂದೊಂದು
ಸಾಲಿನಲ್ಲಿ ಅದು ಆತ್ಮನಿವೇದನೆಯ ರೀತಿಯಲ್ಲಿ ಸಾಗುತ್ತದೆ. ಅದರಲ್ಲಿ ಕೀಳರಿಮೆ ಇದೆ; ಮುಗ್ಧತನವಿದೆ; ಮೂರ್ಖತನವಿದೆ;
ಅವಿವೇಕತನವಿದೆ; ತಿಕ್ಕಲುತನವಿದೆ. ಇವುಗಳನ್ನು ಯಾವುದನ್ನೂ ಮುಚ್ಚಿಕೊಳ್ಳದೆ ನೀವು ಬರೆದಿದ್ದೀರಿ. ನಿಮ್ಮ ಜಾತಿಯ
ವಿಷಮಗಳು- ಜಾತೀಯತೆ- ವರ್ಗವೈಷಮ್ಯತೆ ಎಲ್ಲವೂ ಮುಖ್ಯ ಧಾರೆಯ ಇತರೆ ಸ್ಟ್ರೀಮ್ಗಳಂತೆ ಹರಿವುದು ಮುಖ್ಯ. ನನಗೆ
ಮೆಚ್ಚುಗೆಯಾದ ಮತ್ತೊಂದು ಅಂಶ- ನಿಮ್ಮ ನಿರ್ಮಲ ಮನಸ್ಸು. ಅದರಲ್ಲಿ ದೋಷವಿಲ್ಲ; ಮತ್ಸರವಿಲ್ಲ. ಎಲ್ಲವನ್ನೂ
ಸ್ನೇಹ-ಪ್ರೀತಿಗಳಿಂದಲೇ ಕಾಣುವ ಮನಃಸ್ಥಿತಿ ಸಾಧಿತವಾಗಿರುವುದು- ಇಂದಿನ ರಾಗದ್ವೇಷಾದಿ ಜಗತ್ತಿನಲ್ಲಿ ವಿಭಿನ್ನವಾಗಿದೆ.
ನೀವು ಹೆಂಗರುಳು. ಅದು ಪುಟ ಪುಟದಲ್ಲೂ ವ್ಯಕ್ತವಾಗುತ್ತದೆ. ಅದರಿಂದಾಗಿಯೇ ಒಂದು ಬಗೆಯ ಮಾತೃತ್ವ ನಿಮ್ಮ
ವ್ಯಕ್ತಿತ್ವಕ್ಕೆ ದತ್ತವಾಗಿದೆ. ನಿಮ್ಮ ಹೆಂಡತಿ ಮಕ್ಕಳನ್ನು ನೀವು ನೋಡಿಕೊಳ್ಳುವ ಬಗೆಯಲ್ಲಿ ಅದು ನವಿರಾಗಿ
ಹರಿದಾಡುತ್ತದೆ. ಈ ಹಂತದಲ್ಲಿ ನಿಮ್ಮ ತಂದೆತಾಯಿಗಳ (ಆಗಿನ) ಧೋರಣೆಯನ್ನು ತುಲನೆ ಮಾಡಿ ನೋಡುವ ದೃಷ್ಟಿಯಲ್ಲಿ
ಆತ್ಮವಿಮರ್ಶೆ, ಪಶ್ಚಾತ್ತಾಪ ಎದ್ದುಕಾಣುತ್ತದೆ. ತಂದೆತಾಯಿಗಳ ಕಠೋರತೆಯ ನಡೆ ಕೆಳಜಾತಿಗಳಲ್ಲೂ ಇರಬಹುದಾದ
feudal mind ಅನ್ನು ಎತ್ತಿ ತೋರಿಸುತ್ತದೆ. ಈ ನಡತೆ ಪ್ರತಿಜಾತಿಯಲ್ಲೂ ತನ್ನ ವರ್ತುಲದೊಳಗೇ ಅದನ್ನು ಚಲಾಯಿಸುವ
ಕ್ರಿಯೆಯನ್ನು ಮಾಡುತ್ತಿರುತ್ತದೆ. ಇದಕ್ಕೆ ಕ್ರಿಶ್ಚಿಯನ್ನರೂ ಹೊರತಲ್ಲ; ದಲಿತರೂ ಹೊರತಲ್ಲ.
ನಿಮ್ಮ ಬರವಣಿಗೆಗೆ ಓದಿಸಿಕೊಂಡು ಹೋಗುವ ಗುಣವಿದೆ. ಅದು ತನಗೆ ತಾನು ಸಾಹಿತ್ಯವಾಗಿದೆ. (ಕೊನೆಯ ನಾಲ್ಕಾರು ಅಧ್ಯಾಯಗಳ
ಬಗ್ಗೆ ಆ ಮಾತು ಹೇಳಲಾರೆ).
ತಮ್ಮ ವಿಶ್ವಾಸದ
|